ಹುಳಿಯಾರು :

      ಹುಳಿಯಾರು ಹೋಬಳಿಯ ಸೀಗೆಬಾಗಿಯಲ್ಲಿ ಚಿರತೆ ದಾಳಿಗೆ ಕರು ಬಲಿಯಾದ ಘಟನೆ ನಡೆದಿದ್ದು ಈ ಭಾಗದ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.

      ಸೀಗೆಬಾಗಿಯ ಗೊರವಣ್ಣನವರ ಕರಿಯಮ್ಮ ಅವರಿಗೆ ಸೇರಿದ ಕರು ಚಿರತೆ ದಾಳಿಗೆ ಬಲಿಯಾಗಿದ್ದು ಇವರು ಇಲ್ಲಿನ ಗಂಗಾಧರ್ ಅವರ ತೋಟದಲ್ಲಿ ಎಂದಿನಂತೆ ತಮ್ಮ ನಾಲ್ಕು ದನ ಮತ್ತು ಕರುವನ್ನು ಮೇಯಿಸಲು ಕರೆದೊಯ್ದಿದ್ದರು.

      ರಾಸುಗಳು ಮೇಯುತ್ತಿದ್ದ ಸಂದರ್ಭದಲ್ಲಿ ಚಿರತೆಯೊಂದು ಕರು ಮೇಲೆ ಎಗರಿ ಬಿದ್ದು ಪಕ್ಕದ ಬೇಲಿಗೆ ಕರುವನ್ನು ಎಳೆದೊಯ್ದು ತಿನ್ನಲು ಆರಂಭಿಸಿತು. ಇದನ್ನು ಕಂಡ ಕರಿಯಮ್ಮ ಗಾಭರಿಯಿಂದ ರಾಸುಗಳನ್ನು ಅಲ್ಲಿಯೇ ಬಿಟ್ಟು ಊರಿಗೆ ಓಡಿಹೋಗಿ ವಿಷಯ ಮುಟ್ಟಿಸಿದ್ದಾರೆ.

      ಊರಿನವರು ಬಂದು ನೋಡುವಷ್ಟರಲ್ಲಿ ಚಿರತೆ ಕರುವನ್ನು ಅರ್ಧ ತಿಂದು ಪರಾರಿಯಾಗಿದೆ. ಪರಿಣಾಮ ಊರಿನ ಗ್ರಾಮಸ್ಥರು, ಕುರಿಗಾಹಿಗಳು, ಹೈನುಗಾರರು ತಮ್ಮ ಸಾಕು ಪ್ರಾಣಿಗಳನ್ನು ಮೇಯಿಸಲು ಹೋಗದೆ ಭಯಭೀತರಾಗಿದ್ದಾರೆ. ಹಾಗಾಗಿ ಅರಣ್ಯ ಇಲಾಖೆಯವರು ತಕ್ಷಣ ಬೋನ್ ಇಟ್ಟು ಚಿರತೆ ಹಿಡಿದು ಜನರು ನೆಮ್ಮದಿಯಿಂದ ಇರುವಂತೆ ಮಾಡಬೇಕಿದೆ.

(Visited 16 times, 1 visits today)