ಮಧುಗಿರಿ : 

      ತಾಲೂಕಿನ ಪುರವರ ಹೋಬಳಿಯ ಹಂದ್ರಾಳು ಗ್ರಾಮದ ನಿವೃತ್ತ ಕೆ.ಎ.ಎಸ್. ಅಧಿಕಾರಿ ಹಾಗೂ ಖ್ಯಾತ ಕಥೆಗಾರ ಹಂದ್ರಾಳು ಕೇಶವರೆಡ್ಡಿ ಅವರ ತೋಟಕ್ಕೆ ಬುಧವಾರ ಮಧ್ಯಾಹ್ನ ಕಿಡಿಗೇಡಿಗಳು ಬೆಂಕಿ ಇಟ್ಟ ಪರಿಣಾಮ ಸುಮಾರು 35 ಲಕ್ಷ ಬೆಲೆ ಬಾಳುವ ತೋಟ ಸುಟ್ಟು ಭಸ್ಮವಾಗಿದೆ.

      ಒಟ್ಟು 26 ಎಕರೆಯಲ್ಲಿ 15ಎಕರೆ ಮಾವು, 5 ಎಕರೆ ಸಪೋಟ, ಉಳಿದ 6 ಎಕರೆಯಲ್ಲಿ ಮಹಾಗಣಿ, ಹೆಬ್ಬೇವು, ನೇರಳೆ, ಹಲಸು ಇತರೆ ಗಿಡಗಳನ್ನು ಬೆಳೆಸಿದ್ದೆ, ಆದರೆ ಯಾರೋ ಕಿಡಿಗೇಡಿಗಳು ಮಾಡಿದ ಕೃತ್ಯಕ್ಕೆ ನನ್ನ 13 ವರ್ಷದ ಮರ-ಗಿಡಗಳು ಸುಟ್ಟು ಭಸ್ಮವಾಗಿವೆ. ಈ ಗಿಡ-ಮರಗಳನ್ನು ಬೆಳೆಸಲು ನಾನು ಸುಮಾರು 25 ಲಕ್ಷ ಸಾಲ ಮಾಡಿದ್ದೆ, ಆದರೆ ಈಗ ತೋಟ ಕೆಲ ಗಿಡಗಳು ಹೊರತುಪಡಿಸಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿ, ಸುಮಾರು 35 ಲಕ್ಷ ನಷ್ಟವಾಗಿರುವುದಕ್ಕೆ ನನ್ನ ಕೈಕಾಲುಗಳು ಕುಸಿದು ಬಿದ್ದಂತಾಗಿದೆ. ನಾನು ನಿವೃತ್ತ ಅಧಿಕಾರಿಯಾಗಿದ್ದರೂ ಕೂಡ ನನ್ನ ಜಮೀನಿನ ರಸ್ತೆಗಾಗಿ ಹಲವು ವರ್ಷಗಳಿಂದ ತಾಲ್ಲೂಕು ಹಾಗೂ ಜಿಲ್ಲಾ ಕಚೇರಿಗಳಿಗೆ ಅಲೆದಾಡಿದೆ. ಆದರೆ ಎಲ್ಲಾ ಅಧಿಕಾರಿಗಳು ಕೇವಲ ನಾಟಕದ ಮಾತುಗಳನ್ನಾಡಿದರೆ ಹೊರತು ಯಾರು ನನ್ನ ಕೆಲಸ ಮಾಡಿಕೊಡಲಿಲ್ಲ.

     ಇಂತಹ ನೋವಿನಲ್ಲಿರುವಾಗ ಮತ್ತು ಮುಂದೆ ನನಗೆ ಆಸರೆಯಾಗುತ್ತೇ ಎಂದು ನಂಬಿದ್ದ ಗಿಡ-ಮರಗಳು ಏಕಾ ಏಕಿ ಇಂದು ಸುಟ್ಟು ಕರಕಲಾಗಿರುವ ವಿಚಾರ ನನ್ನ ಜಂಘಾಬಲವೇ ಕುಸಿಯುವಂತಾಗಿದೆ. ಅಧಿಕಾರಿಗಳು ಇಂತಹ ಸಂದರ್ಭದಲ್ಲಾದರೂ ಉದಾಸೀನ ತೋರದೆ ಸರ್ಕಾರದಿಂದ ಶೀಘ್ರ ನಷ್ಟ ಪರಿಹಾರ ಕೊಡಿಸಬೇಕೆಂದು ಖ್ಯಾತ ಕಥೆಗಾರ ಕೇಶವರೆಡ್ಡಿ ಹಂದ್ರಾಳು ಮನವಿ ಮಾಡಿದ್ದಾರೆ.

(Visited 39 times, 1 visits today)