ತುಮಕೂರು :
ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು ಪಟ್ಟಣ ಪಂಚಾಯತಿಯ 16 ವಾರ್ಡುಗಳಿಗೆ ಸಾರ್ವತ್ರಿಕ ಚುನಾವಣೆ ಮತ್ತು ತಿಪಟೂರು ನಗರಸಭೆಯ 31 ನೇ ವಾರ್ಡ್ ಹಾಗೂ ಕೊರಟಗೆರೆ ಪಟ್ಟಣ ಪಂಚಾಯಿತಿಯ 4ನೇ ವಾರ್ಡ್ಗೆ ಮಾರ್ಚ್ 29ರಂದು ಉಪಚುನಾವಣೆ ನಡೆಸಲು ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಅವರು ಚುನಾವಣಾ ವೇಳಾಪಟ್ಟಿ ಹೊರಡಿಸಿದ್ದಾರೆ.
ಚುನಾವಣಾ ವೇಳಾಪಟ್ಟಿಯಂತೆ ಚುನಾವಣಾಧಿಕಾರಿಗಳು ಮಾರ್ಚ್ 10 ಚುನಾವಣಾ ನೋಟೀಸನ್ನು ಹೊರಡಿಸಲಿದ್ದು, ಮಾರ್ಚ್ 17 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿರುತ್ತದೆ. ಮಾರ್ಚ್ 18 ನಾಮಪತ್ರ ಪರಿಶೀಲನೆ ನಡೆಯಲಿದ್ದು, ಮಾರ್ಚ್ 20 ಉಮೇದುವಾರಿಕೆ ಹಿಂಪಡೆಯಲು ಕೊನೆ ದಿನವಾಗಿರುತ್ತದೆ. ಮತದಾನ ಅವಶ್ಯವಿದ್ದರೆ ಮಾರ್ಚ್ 29ರಂದು ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ಚುನಾವಣಾ ಮತದಾನ ನಡೆಯಲಿದೆ. ಮರು ಮತದಾನವಿದ್ದಲ್ಲಿ ಮಾರ್ಚ್ 30ರಂದು ನಡೆಯಲಿದ್ದು, ಮತ ಎಣಿಕೆಯು ಮಾರ್ಚ್ 31ರಂದು ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ.
ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆಯು ಮಾರ್ಚ್ 10ರಿಂದ ಜಾರಿಗೆ ಬರಲಿದ್ದು, ಮಾರ್ಚ್ 31ರವರೆಗೆ ಜಾರಿಯಲ್ಲಿರುತ್ತದೆ. ಸರ್ಕಾರದ ಅಧಿಸೂಚನೆ-11 ಸಂಖ್ಯೆ: ಸಿಆಸುಇ 12 ಹೆಚ್ಹೆಚ್ಎಲ್ 2020 ದಿನಾಂಕ 21.11.2020 ರಂತೆ ದಿನಾಂಕ 13.03.2021 ಎರಡನೇ ಶನಿವಾರವು ನೆಗೋಷಿಯೆಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ 1881 ರ ಪ್ರಕಾರ ಸಾರ್ವತ್ರಿಕ ರಜಾದಿನ ಎಂದು ಅಧಿಸೂಚಿಸಲಾಗಿದ್ದು, ಅಂದು ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿರುವುದಿಲ್ಲ. ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರು ಸದಾಚಾರ ಸಂಹಿತೆಯನ್ನು ಯಾವುದೇ ರೀತಿಯಲ್ಲೂ ಉಲ್ಲಂಘಿಸದಂತೆ ಸಹಕರಿಸಲು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.