ತುಮಕೂರು:

       ದೆಹಲಿಯಲ್ಲಿ ದೇಶದ ಅನ್ನದಾತರು ನಡೆಸುತ್ತಿರುವ ಪ್ರತಿಭಟನೆ ಬೆಂಬಲಿಸಿ ರಾಜ್ಯದ ಜಿಯೋಸ್ಟೇಷಿಯಲ್ ಇಂಜಿನಿಯರಿಂಗ್‍ನಲ್ಲಿ ಎಂ.ಟೆಕ್ ಪೂರೈಸಿರುವ ಟೆಕ್ಕಿಯೊಬ್ಬರು ಮಲೆಮ ಹದೇಶ್ವರ ಬೆಟ್ಟದಿಂದ ದೆಹಲಿವರೆಗೆ 6 ಸಾವಿರ ಕಿ.ಮೀ. ಪಾದಯಾತ್ರೆ ಕೈಗೊಂಡಿದ್ದಾರೆ.

      ರೈತರ ಹೋರಾಟವನ್ನು ಬೆಂಬಲಿಸಿ ಮಲೆಮಹದೇಶ್ವರ ಬೆಟ್ಟದಿಂದ ಪಾದಯಾತ್ರೆ ಕೈಗೊಂಡಿರುವ ಬಾಗಲಕೋಟೆ ಮೂಲದ ನಾಗರಾಜ್ ಕಲಗುಟಕರ್ ಅವರು ತಾಲ್ಲೂ ಕಿನ ಹೊನ್ನುಡಿಕೆಗೆ ಆಗಮಿಸಿದಾಗ ರೈತ ಸಂಘ ಹಾಗೂ ಸಹಜ ಬೇಸಾಯ ಶಾಲೆ ವತಿಯಿಂದ ಆತ್ಮೀಯವಾಗಿ ಬರ ಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪಾದಯಾತ್ರಿ ನಾಗರಾಜ್ ಕುಲಗುಟಕರ್, ನಾನು 2015 ರಿಂದಲೂ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು, ಭ್ರಷ್ಟಾಚಾರ, ಅಕ್ರಮ ಮರಳು ಸಾಗಣೆ ವಿರುದ್ಧ ಹೋರಾಟ ನಡೆಸುತ್ತಾ ಬಂದಿದ್ದೇನೆ. ಪ್ರಸ್ತುತ 4 ತಿಂಗಳಿಂದಲೂ ದೆಹಲಿಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೆಲ ಕಾಯ್ದೆಗಳ ವಾಪಸ್ಸಾತಿಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಪಾದಯಾತ್ರೆ ಕೈಗೊಂಡಿರುವುದಾಗಿ ಹೇಳಿದರು.
ಫೆ. 11 ರಿಂದ ಪಾದಯಾತ್ರೆ ಕೈಗೊಂಡಿದ್ದು, ಪ್ರತಿ ದಿನ 30 ಕಿ.ಮೀ. ಕ್ರಮಿಸಿ ಹೋಬಳಿ, ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳ ಮೂಲಕ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುತ್ತಾ ಸಾಗುತ್ತಿದ್ದೇನೆ. ನಾನು ಸಾಗಿದ ದಾರಿಯುದ್ದಕ್ಕೂ ರೈತ ಸಂಘಟನೆಗಳು ಬೆಂಬಲ ವ್ಯಕ್ತಪಡಿಸುತ್ತಿವೆ ಎಂದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ 3 ತಿದ್ದುಪಡಿ ಕಾಯ್ದೆಗಳ ವಾಪಸ್ಸಾತಿಗೆ ರೈತರು ಒತ್ತಾಯ ಮಾಡುತ್ತಿರುವುದು ನ್ಯಾಯಯುತವಾಗಿದೆ ಎಂದರು.

     ಮಲೆಮಹದೇಶ್ವರ ಬೆಟ್ಟದಿಂದ ತುಮಕೂರು ಜಿಲ್ಲೆವರೆಗೆ 1300 ಕಿ.ಮೀ. ಕ್ರಿಮಿಸಿದ್ದೇನೆ. ನಾನು ನೇರವಾಗಿ ತುಮಕೂರು ಜಿಲ್ಲೆಗೆ ಬಂದಿಲ್ಲ. ಚಾಮರಾಜನಗರ, ಮೈಸೂರು, ಬೆಂಗಳೂರು, ದೊಡ್ಡಬಳ್ಳಾಪುರ, ಚಿಕ್ಕಬ ಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಕೊಡಗು, ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಜಿಲ್ಲೆಯಲ್ಲಿ ಕ್ರಮಿಸಿ ನಂತರ ತುಮಕೂರಿಗೆ ಬಂದಿದ್ದೇನೆ. ಹಾಗಾಗಿ 1300 ಕಿ.ಮೀ. ಆಗಿದೆ. ಪಾದಯಾತ್ರಿ ನಾಗರಾಜ ಕಲಗುಟಕರ್ ಅವರನ್ನು ಅಭಿನಂದಿಸಿ ಮಾತನಾಡಿದ ರೈತ ಸಂಘದ ಎಲ್. ರವೀಶ್, ರೈತರು ಮತ್ತು ರೈತ ಸಂಘಟನೆಯವರು ಮಾಡಬೇಕಾದ ಕೆಲಸವನ್ನು ಇವರು ಮಾಡುತ್ತಿದ್ದಾರೆ. ಇವರು ಸಾಗುವ ದಾರಿಯುದ್ದಕ್ಕೂ ಒಳ್ಳೆಯದಾಗಲಿ. ಇವರ ಹೋರಾಟ ಯಶಸ್ವಿಯಾಗಲಿ ಎಂದು ಹಾರೈಸಿದರು.

(Visited 5 times, 1 visits today)