ತುಮಕೂರು


ಮುಂಬರುವ ವಿಧಾನಸಭೆ ಮತ್ತು ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪರಿಶಿಷ್ಟ ವರ್ಗದ ಯುವಜನರನ್ನು ಸಂಘಟನೆ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಬಲ ನೀಡುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಪರಿಶಿಷ್ಟ ಪಂಗಡದ ಕಾಂಗ್ರೆಸ್ ಮುಖಂಡರಿಗೆ ಸಲಹೆ ನೀಡಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪರಿಶಿಷ್ಟ ಪಂಗಡದ ಮುಖಂಡರುಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ತುಮಕೂರು ಜಿಲ್ಲಾ ಘಟಕದಲ್ಲಿ ಪರಿಶಿಷ್ಟ ಪಂಗಡ ವಿಭಾಗದ ಪದಾಧಿಕಾರಿಗಳ ಪರಿಷ್ಕರಣೆಯ ಜೊತೆಗೆ,ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿರುವವರಿಗೆ ಸ್ಥಾನಮಾನ ನೀಡಿರುವುದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ಎಂದರು.
ತುಮಕೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿಯೂ ಪರಿಶಿಷ್ಟ ಪಂಗಡದ ಮತದಾರರ ಸಂಖ್ಯೆ ಸಾಕಷ್ಟಿದೆ.ಕೆಲವು ಕ್ಷೇತ್ರಗಳಲ್ಲಿ ನಿರ್ಣಾಯಕ ಸ್ಥಾನದಲ್ಲಿದ್ದಾರೆ.ಬಿಜೆಪಿ ಸರಕಾರದ ಬಡವರ ವಿರೋಧಿ ನೀತಿಗಳ ವಿರುದ್ದ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡುವ ಮೂಲಕ ಭ್ರಷ್ಟಾಚಾರವನ್ನೇ ಬಂಡವಾಳ ಮಾಡಿಕೊಂಡಿರುವ ಕೇಂದ್ರ ಮತ್ತು ರಾಜ್ಯ ಸರಕಾರವನ್ನು ಅಧಿಕಾರದಿಂದ ಕಿತ್ತೊಗೆಯಲು ಯುವಜನತೆ ಮುಂದಾಗಬೇಕೆಂದು ಆರ್.ರಾಮಕೃಷ್ಣ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡದ ಜಿಲ್ಲಾಧ್ಯಕ್ಷ ನರಸಿಂಹಯ್ಯ ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ.ಆದರೆ ಅಂತರಿಕ ಭಿನ್ನಾಭಿಪ್ರಾಯದಿಂದ ಕೆಲವೊಮ್ಮೆ ಹಿನ್ನೆಡೆಯಾಗಿದೆ.ಈ ಬಾರಿ ಹಾಗಾದಂತೆ ಎಚ್ಚರಿಕೆ ವಹಿಸಬೇಕಾಗಿದೆ.ಕಾಂಗ್ರೆಸ್ ಸರಕಾರದಿಂದ ಪರಿಶಿಷ್ಟ ಪಂಗಡದ ಜನರಿಗೆ ಹೆಚ್ಚಿನ ಅನುಕೂಲವಾಗಿದೆ.ಪರಿಶಿಷ್ಟ ಪಂಗಡಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಬೇಕೆಂಬುದು ಹಲವು ದಿನಗಳ ಹೋರಾಟವಾಗಿದೆ.ಆದರೆ ಸುಗ್ರೀವಾಜ್ಞೆಗಿಂತ ಸಚಿವ ಸಂಪುಟದಲ್ಲಿಟ್ಟು ಅನುಮೋಧನೆ ಪಡೆದು ಜಾರಿಗೆ ತಂದರೆ ಹೆಚ್ಚಿನ ಭದ್ರತೆ ದೊರೆತಂತಾಗುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಸರಕಾರ ಬಂದರೆ ಹೆಚ್ಚಿನ ಬಲ ಬರಲಿದೆ ಎಂದರು.
ಕೆಪಿಸಿಸಿ ಪರಿಶಿಷ್ಟ ಪಂಗಡದ ರಾಜ್ಯಾಧ್ಯಕ್ಷ ಪಾಲಯ್ಯ ಮಾತನಾಡಿ,ತುಮಕೂರು ಜಿಲ್ಲೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಹೆಚ್ಚಿನ ಅವಕಾಶವಿದೆ. 11 ಕ್ಷೇತ್ರಗಳಲ್ಲಿ ಪರಿಶಿಷ್ಟ ಮತದಾರರ ಸಂಖ್ಯೆಯೂ ಹೆಚ್ಚಿದೆ.ಯುವಜನರನ್ನು ಸಂಘಟಿಸುವ ಉದ್ದೇಶದಿಂದ ಎಲ್ಲಾ ಬೂತ್‍ಗಳಲ್ಲಿಯೂ ಎಸ್ಸಿ ಸೆಲ್‍ನ ಪದಾಧಿಕಾರಿಗಳನ್ನು ನೇಮಕ ಮಾಡಿ, ಅವರುಗಳ ಮೂಲಕ ಪರಿಶಿಷ್ಟ ಪಂಗಡದ ಎಲ್ಲಾ ಮತದಾರರನ್ನು ತಲುಪಿ, ಕಾಂಗ್ರೆಸ್ ಪಕ್ಷದ ಸಾಧನೆಗಳು, ಇದುವರೆಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಕಾಂಗ್ರೆಸ್ ಪಕ್ಷ ನೀಡಿರುವ ಕಾರ್ಯಕ್ರಮಗಳನ್ನು ತಿಳಿಸಿ, ಮನದಟ್ಟು ಮಾಡುವ ಮೂಲಕ ಕಾಂಗ್ರೆಸ್ ಪಕ್ಷದತ್ತ ಅವರನ್ನು ಸೆಳೆಯುವ ಅಗತ್ಯವಿದೆ. ಪಕ್ಷದ ಪರಿಶಿಷ್ಟ ಪಂಗಡದ ಜಿಲ್ಲಾಧ್ಯಕ್ಷರಾಗಿ ನರಸಿಂಹಯ್ಯ ಅವರನ್ನು ನೇಮಿಸಿದೆ.ಹಿರಿಯರಾದ ನರಸಿಂಹಯ್ಯ ಅವರ ನೇತೃತ್ವದಲ್ಲಿ ಯುವಜನರು ಒಗ್ಗೂಡಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸಬೇಕಿದೆ ಎಂದರು.
ಪೂರ್ವಭಾವಿ ಸಭೆಯಲ್ಲಿ ಮಾಜಿ ಶಾಸಕ ಲಕ್ಕಪ್ಪ,ಪರಿಶಿಷ್ಟ ಪಂಗಡ ವಿಭಾಗದ ಪುರುಷೋತ್ತಮ್ ಬಾಬು, ಓಬಳರಾಜು, ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು

(Visited 1 times, 1 visits today)