ತುಮಕೂರು


ನಮ್ಮ ದೇಶದ ಅತ್ಯಂತ ಪವಿತ್ರವಾದ ಗ್ರಂಥ ಸಂವಿಧಾನ. ಇದಕ್ಕೆ ಮೂಲ ಕಾರಣಕರ್ತರಾಗಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಯಾವುದೇ ಜಾತಿ, ತತ್ವಗಳಿಗೆ ಭೇದ ಭಾವ ತೋರಿಸದೆ ಎಲ್ಲವನ್ನು ಸಂವಿಧಾನದಲ್ಲಿ ಅಳವಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಇದುವರೆಗೂ ಯಾರೇ ಪ್ರಯತ್ನ ಪಟ್ಟರೂ ಸಂವಿಧಾನವನ್ನು ಬದಲಾವಣೆ ಮಾಡಲು ಸಾಧ್ಯವಾಗಿಲ್ಲ. ನಮ್ಮ ದೇಶದ ತಳಹದಿಯನ್ನು ಬದಲಾವಣೆ ಮಾಡಲು ಯಾರಾದರೂ ಕೈ ಹಾಕಿದರೆ ಅದರಿಂದ ದೇಶದ ಭದ್ರತೆ, ಅಖಂಡತೆಗೆ ಧಕ್ಕೆ ಬರುತ್ತದೆ ಎಂದು ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಸರಳವಾಗಿ ಹಮ್ಮಿಕೊಂಡಿದ್ದ ಸಂವಿಧಾನಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ 132ನೇ ಜಯಂತಿಯಲ್ಲಿ ಅವರ ಭಾವಚಿತ್ರ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದ ನಂತರ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಅಂಬೇಡ್ಕರ್‍ರವರನ್ನು ಸಮಗ್ರವಾಗಿ ಅಭ್ಯಸಿಸಬೇಕು. ಅವರ ಬಗ್ಗೆ ಸಮಗ್ರವಾಗಿ ತಿಳುವಳಿಕೆ ಹೊಂದಬೇಕು. ಸಮಗ್ರವಾಗಿ ಅವರನ್ನು ತಿಳುವಳಿಕೆ ಹೊಂದಿದಾಗ ಅವರ ಬಗ್ಗೆ ಏನನ್ನೂ ಮಾತನಾಡಲು ಸಾಧ್ಯವಿಲ್ಲ. ಅಷ್ಟು ಪವಿತ್ರವಾಗಿ ಜೀವನ ಸಾಗಿಸಿದವರು ಅಂಬೇಡ್ಕರ್‍ರವರು ಎಂದು ಬಣ್ಣಿಸಿದರು.
ನಮ್ಮ ಮುಂದಿನ ಪೀಳಿಗೆಗೆ ಅಂಬೇಡ್ಕರ್ ಮತ್ತು ಅವರು ಬರೆದಿರುವ ಸಂವಿಧಾನದ ಬಗ್ಗೆ ತಿಳಿಸುವ ಕಾರ್ಯ ಅಗತ್ಯವಾಗಿದೆ. ಅಂಬೇಡ್ಕರ್ ಅವರು ಎಷ್ಟು ಕಷ್ಟ ಪಟ್ಟು ಮೇಲೆ ಬಂದರು ಎಂಬುದರ ಬಗ್ಗೆ ತಿಳಿದುಕೊಳ್ಳಬೇಕಿದೆ ಎಂದರು.
ಒಬ್ಬ ವ್ಯಕ್ತಿ, ದೇಶ ಹಾಗೂ ವಿಶ್ವವನ್ನು ಉದ್ಧಾರ ಮಾಡಲು ಶಿಕ್ಷಣವೊಂದೇ ಪರಿಹಾರ ಎಂದು ಅಂಬೇಡ್ಕರ್ ಹೇಳಿದ್ದಾರೆ. ಪ್ರತಿಯೊಬ್ಬರಿಗೂ ಶಿಕ್ಷಣ ಮುಟ್ಟುವಂತಾಗಬೇಕು ಎಂದು ಸಂವಿಧಾನದಲ್ಲಿ ಬರೆದಿದ್ದಾರೆ. ಇಂದಿನ ಚುನಾವಣಾ ವ್ಯವಸ್ಥೆಯೂ ಸಹ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಬರೆದಿರುವಂತೆಯೇ ನಡೆಯುತ್ತಿದೆ ಎಂದು ಹೇಳಿದರು.
ಅಂಬೇಡ್ಕರ್ ಭಾರತ ರತ್ನ ಅಲ್ಲ, ಅವರು ವಿಶ್ವರತ್ನ. ಅಂಬೇಡ್ಕರ್ ಅಭಿಮಾನಿ ಇಲ್ಲದವನು ಇದ್ದಾನೆ ಎಂದರೆ ಆತ ನಮ್ಮ ದೇಶದವನಲ್ಲ ಎಂದರ್ಥ. ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಸಂವಿಧಾನದ ಆದರ್ಶ ಆಧರಿಸಿ ನಡೆಯುತ್ತಿದೆ. ಹಾಗಾಗಿ ಸಂವಿಧಾನ ರಚಿಸಿದವರ ಅಭಿಮಾನಿ ಇಲ್ಲ ಎಂದರೆ ಏನರ್ಥ ಎಂದು ಅವರು ಪ್ರಶ್ನಿಸಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಮಾತನಾಡಿ, ಅಂಬೇಡ್ಕರ್‍ರವರ ಚಿಂತನೆಯನ್ನು ನಾವೆಲ್ಲೂ ಅರಿತು ಮೈಗೂಡಿಸಿಕೊಳ್ಳಬೇಕು. ಕೇವಲ ಅಂಬೇಡ್ಕರ್ ಅವರ ಹೆಸರನ್ನು ಹೇಳಿದರೆ ಸಾಲದು, ಅವರ ಚಿಂತನೆಗಳನ್ನು ನಾವೆಲ್ಲೂ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಾವು ನೀಡುವ ನಿಜವಾದ ಗೌರವವಾಗಿದೆ ಎಂದರು.
ಅಂಬೇಡ್ಕರ್ ಬಗ್ಗೆ ಮತ್ತು ಅವರ ಚಿಂತನೆಗಳ ಹೆಚ್ಚೆ ಹೆಚ್ಚು ಚರ್ಚೆ ಮಾಡುತ್ತಲೇ ಇರಬೇಕು. ಆಗ ಮಾತ್ರ ಮುಂದಿನ ಪೀಳಿಗೆಗೂ ಅವರ ಬಗ್ಗೆ ತಿಳಿಸುವಂತಹ ಕಾರ್ಯವಾಗಲಿದೆ. ಇದರಿಂದ ನಮ್ಮ ಜ್ಞಾನವೂ ವಿಸ್ತರಿಸುತ್ತಾ ಹೋಗುತ್ತೆ ಎಂದ ಅವರು, ಅಂಬೇಡ್ಕರ್ ಅವರ ಜ್ಞಾನವನ್ನು ಸಂವಿಧಾನ ಸಾಕ್ಷೀಕರಿಸುತ್ತದೆ ಎಂದರು.
ಭಾರತದ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠವಾದುದು. ಇಂತಹ ಮಹತ್ವವಾದ ಸಂವಿಧಾನವನ್ನು ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ನೀಡಿದ್ದಾರೆ. ಅವರನ್ನು ಸದಾ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಉಪವಿಭಾಗಾಧಿಕಾರಿ ಹೋಟೆಲ್ ಶಿವಪ್ಪ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಕೃಷ್ಣಪ್ಪ ಹಾಗೂ ಸಮುದಾಯದ ಮುಖಂಡರುಗಳು ಭಾಗವಹಿಸಿದ್ದರು.

(Visited 1 times, 1 visits today)