ತುಮಕೂರು :

      ರಾಜಕೀಯದಲ್ಲಿ ಧರ್ಮ ಬೆರೆಯಬಾರದು, ಧರ್ಮದ ಮಾರ್ಗದರ್ಶನ ರಾಜಕೀಯಕ್ಕೆ ಇರಬೇಕು ಸೋಮೇಕಟ್ಟೆ ಕಾಡಸಿದ್ಧೇಶ್ವರ ಮಠದ ಅಧ್ಯಕ್ಷ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

      ಮಠದ ಆವರಣದಲ್ಲಿ ಆಯೋಜಿಸಿದ್ದ ಧರ್ಮ ಸಭೆಯಲ್ಲಿ ಪ್ರವಚನ ನೀಡುತ್ತಾ ಮಾತನಾಡಿದ ಅವರು, ಮುಖ್ಯಮಂತ್ರಿ ಅವರು ಅಧಿಕಾರದಲ್ಲಿ ನ್ಯೂನತೆ ಬರದಂತೆ ದಯೆ ಪಾಲಿಸಿ ಎಂದು ಕೇಳಿಕೊಂಡರು. ಅವರ ಆಶಯದಂತೆ ಕಾಡಸಿದ್ಧೇಶ್ವರರನ್ನು ಸ್ಮರಿಸಿದ್ದೇವೆ ಎಂದರು.

      ವಸತಿ ಸಚಿವ ವಿ.ಸೋಮಣ್ಣ, ಯಡಿಯೂರಪ್ಪ ಅವರು ಮೂರು ವರ್ಷ ನಾಲ್ಕು  ತಿಂಗಳು ಮುಖ್ಯಮಂತ್ರಿಯಾಗಿಯೇ ಇರುತ್ತಾರೆ. ಅವರ ಆಡಳಿತದಲ್ಲಿ ರಾಜ್ಯವು ದೇಶದಲ್ಲಿಯೇ ಸಂಪದ್ಭರಿತ ರಾಜ್ಯವಾಗಲಿ ಎಂದು ಆಶೀರ್ವದಿಸಲು ನಾವು ಕೇಳಿಕೊಳ್ಳುತ್ತೇವೆ ಎಂದು ಹೇಳಿದರು.

     ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಈ ಮಠವು ಹಿಂದಿನಿಂದಲೂ ಅನೇಕ ಸಂಸ್ಥಾನಗಳಿಗೆ ಮಾರ್ಗದರ್ಶನ ಮಾಡಿದೆ. ಸಮಾಜದಲ್ಲಿ ಸೌಹಾರ್ದತೆಯಿಂದ ಬದುಕಲು ಕಲಿಸುತ್ತಿದೆ. ಅನ್ನ ಮತ್ತು ಅಕ್ಷರ ದಾಸೋಹ ಮಾಡುತ್ತಿದೆ. ಜನರ ಸಂಕಷ್ಟ ನಿವಾರಿಸಲು ಶ್ರಮಿಸುತ್ತಿದೆ. ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಸಾಮಾಜಿಕ ಬದಲಾವಣೆಗೆ ದುಡಿಯುತ್ತಿದೆ ಎಂದರು.  

      ಈ ಮಠಕ್ಕೆ ಬರಬೇಕೆಂಬ ಹಂಬಲ ಬಹಳ ದಿನಗಳಿಂದ ಇತ್ತು. ಈಗ ಅಧಿವೇಶನ ಇದ್ದರೂ, ಓಡೋಡಿ ಬಂದಿದ್ದೇನೆ. ಮಠದ ಮಾರ್ಗದರ್ಶನ ಮುಂದೆಯೂ ಇರಲಿ ಎಂದು ಆಶಿಸಿದರು.

(Visited 17 times, 1 visits today)